ಸೌಂದರ್ಯ ಫಿಲ್ಸಂ ದ್ವಿತೀಯ ಕಾಣಿಕೆ ’ಅಪ್ಪು ಪಪ್ಪು’ ಗೆ ಕರ್ನಾಟಕದಾದ್ಯಂತ ಶಾಲಾ ಕಾಲೇಜುಗಳಿಂದ ಹಾಗೂ ಕುಟುಂಬ ವರ್ಗದಿಂದ ಅಪಾರ ಅಪ್ಪುಗೆ ೨ ವಾರದ ಪ್ರದರ್ಶನದಿಂದ ಸಂದಾಯವಾಗಿದೆ.
ಈ ಸಂತೋಷದ ವಿಚಾರವನ್ನು ಕೆಲವು ಶಾಲಾ ಕಾಲೇಜುಗಳ ಪ್ರಾಂಶುಪಾಲರಿಂದ ಕಳೆದ ಸೋಮವಾರ ಮಲ್ಲೇಶ್ವರಂ ಕ್ಲಬ್ ಸೌಂದರ್ಯ ಹಾಲ್ನಲ್ಲಿ ವ್ಯಕ್ತವಾಗುವಂತೆ ನಿರ್ಮಾಪಕ ಸೌಂದರ್ಯ ಜಗದೀಶ್ ವ್ಯವಸ್ಥೆ ಮಾಡಿದ್ದರು.
ಎಸ್.ಜೆ.ಪಿ. ಪ್ರಾಂಶುಪಾಲ ಬಸವೇಗೌಡರು ಸಾಮಾಜಿಕ ಕಳಕಳಿ ಹಾಗೂ ಪರಿಸರ ಪ್ರೇಮವನ್ನು ವ್ಯಕ್ತ ಮಾಡುವ ಈ ಚಿತ್ರ ಮಾಮೂಲಿಯಲ್ಲದೆ ೯೦% ರಷ್ಟು ಚೌಕಟ್ಟನ್ನು ಮೀರಿ ಮನೆಮಂದಿಗೆಲ್ಲಾ ಮನರಂಜನೆಯನ್ನು ನೀಡುವ ಪ್ರಯತ್ನವಾಗಿದೆ ಎಂದು ಶ್ಲಾಗಿಸಿದರು. ಅವರ ವಿದ್ಯಾ ಸಂಸ್ಥೆಯಲ್ಲಿ ಇರುವ ೨೦೦೦ ವಿದ್ಯಾರ್ಥಿಗಳಲ್ಲಿ ೮೦%ರಷ್ಟು ವಿದ್ಯಾರ್ಥಿಗಳು ’ಅಪ್ಪು ಪಪ್ಪು’ ವನ್ನು ವೀಕ್ಷಿಸಿದ್ದಾರಂತೆ.
ಬೆಂಗಳೂರು ಉತ್ತರ ಜಿಲ್ಲೆಯ ಶಾಲೆಗಳ ಪ್ರಾಂಶುಪಾಲ ಆಂಜನಪ್ಪ ಮಾತನಾಡುತ್ತಾ ೩೦ ಚಿತ್ರಮಂದಿರಗಳಲ್ಲಿ ೧೫೦೦ ವಿದ್ಯಾರ್ಥಿಗಳು ಈಗಾಗಲೇ ಚಿತ್ರ ವೀಕ್ಷಿಸಿದ್ದು ಗ್ಲೋಬಲ್ ಇನ್ಸ್ಟಿಟ್ಯುಟ್ನ ೧೫೦೦ ವಿದ್ಯಾರ್ಥಿಗಳಿಂದ ಬೇಡಿಕೆ ಬಂದಿದೆ ಎಂದು ಹರ್ಷ ವ್ಯಕ್ತ ಪಡಿಸಿದರು. ೩ನೇ ತರಗತಿಯಲ್ಲಿ ಓದುತ್ತಿರುವ ಮಾಸ್ಟರ್ ಸ್ನೇಹಿತ್ ಇಡೀ ವಿದ್ಯಾರ್ಥಿ ಸಮೂಹಕ್ಕೆ ಅವನ ಪಾತ್ರದಿಂದ ದೊಡ್ಡ ಕೊಡುಗೆ ಕೊಟ್ಟಿದ್ದಾನೆ. ವಯಸ್ಸಿಗೆ ಮೀರಿ ಯಾವುದೇ ಹಿಂಜರಿಕೆಯಿಲ್ಲದೆ ಅಮೋಘವಾಗಿ ಪಾತ್ರ ನಿರ್ವಹಿದ್ದಾನೆ ಎಂದರು.
ಸಾಯಿ ಕಾಲೇಜ್ನ ಪ್ರಾಂಶುಪಾಲ ದಯಾನಂದ್ ಮಾತನಾಡುತ್ತಾ ’ಅಪ್ಪು ಪಪ್ಪು’ ಚಿತ್ರ ಇತಿಹಾಸದಲ್ಲೇ ಮೈಲಿಗಲ್ಲು ಎಂದು ಕೊಂಡಾಡಿದರು. ಮಾಸ್ಟರ್ ಸ್ನೇಹಿತ್ ಅವನ ಪಾತ್ರಕ್ಕೆ ಶಕ್ತಿ ಮೀರಿ ಜೀವ ತುಂಬಿದ್ದಾನೆ ಎಂದು ಮೆಚ್ಚುಗೆ ಮಾತಾಡಿದರು.
ಭಾರತ್ ಸ್ಕೌಟ್ ಮತ್ತು ಗೈಡ್ಸ್ನ ಕಾರ್ಯದರ್ಶಿ ಪಳನಿ ಮಾತನಾಡುತ್ತಾ ’ಅಪ್ಪು ಪಪ್ಪು’ ಹಾಲಿವುಡ್ಡಿನ ’ಬೇಬಿಸ್ ಡೇ ಔಟ್ ಮತ್ತು ಡನ್ಸನ್ ಚೆಕ್ಸ ಇನ್’ ಸಿನಿಮಾಗಳಿಗೆ ಸಮ ಎಂದು ಕೊಂಡಾಡಿದರು.
’ಅಪ್ಪು ಪಪ್ಪು’ ಚಿತ್ರದಲ್ಲಿ ಕೋಮಲ್ ಜೊತೆ ಸಹಾಯಕಿಯಾಗಿ ಅಭಿನಯಿಸಿರುವ ನಟಿ ಮಾಧುರಿ ಮಾತನಾಡುತ್ತಾ ಮಾಸ್ಟರ್ ಸ್ನೇಹಿತ್ ದೊಡ್ಡವನಾದ ಮೇಲೆ ದೊಡ್ಡ ನಾಯಕ ನಟ ಆಗುವುದರಲ್ಲಿ ಸಂದೇಹವಿಲ್ಲ ಎನ್ನುತ್ತಾರೆ. ಒರಾಂಗುಟನ್ ಅಂತಹ ಪ್ರಾಣಿ ಶೇಕ್ಹ್ಯಾಂಡ್ ಮಾಡುವುದೇ ಸಾಹಸ ಅಂತುಹದರಲ್ಲಿ ಅದರ ಜೊತೆ ಲೀಲಾಜಾಲವಾಗಿ ಮಾಸ್ಟರ್ ಸ್ನೇಹಿತ್ ಅಭಿನಯಿಸಿರುವುದು ಅದ್ಭುತ ಎಂದರು.
ನಿರ್ದೇಶಕ ಅನಂತ್ರಾಜು ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಧೈರ್ಯವೇ ಪ್ರಮುಖ ವಿಚಾರ ಎಂದರು. ನಿರ್ಮಾಪಕ ಸೌಂದರ್ಯ ಜಗದೀಶ್ ಮಾತನಾಡುತ್ತಾ ಮಾಧ್ಯಮಗಳು ಚಿತ್ರದ ಬಗ್ಗೆ ಹಾಗೂ ಅವರ ಪುತ್ರನ ಬಗ್ಗೆ ಮೆಚ್ಚುಗೆ ಮಾತನ್ನು ಹೇಳಿರುವುದಕ್ಕೆ ವಂದನೆ ಅರ್ಪಿಸಿದರು. ಮಾಸ್ಟರ್ ಸ್ನೇಹಿತ್ ತನಗೆ ಸಿಕ್ಕ ಪ್ರತಿಕ್ರಿಯೆಯಿಂದ ಎಲ್ಲರಿಗೂ ಥ್ಯಾಂಕ್ಸ ಎನ್ನುತ್ತಾ ನಿಮೆಲ್ಲರ ಆಶೀರ್ವಾದ ಬೇಕು ಎಂದು ವಿನಂತಿಸಿಕೊಂಡನು.
ಕಳೆದ ಸೋಮವಾರ ಸಂಜೆ ಈ ಪತ್ರಿಕಾ ಗೋಷ್ಠಿಗೂ ಮುಂಚೆ ಅಗಲಿದ ಹಿರಿಯ ತಾರೆ ವೈಶಾಲಿ ಕಾಸರವಳ್ಳಿ ಅವರ ನಿಧನಕ್ಕೆ ಒಂದು ನಿಮಿಷದ ಮೌನಾಚರಣೆ ಆಚರಿಸಲಾಯಿತು.